ಬ್ರಹ್ಮಾವರ :ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಕೊಕ್ಕರ್ಣೆಯ ಪ್ರಧಾನ ಕಛೇರಿಯಲ್ಲಿ, ಸಂಸ್ಥೆಯು ಆಯ್ಕೆ ಮಾಡಿಕೊಂಡಿರುವ ಆಸಕ್ತ ಯುವಕ ಯುವತಿಯರಿಗೆ ಮೊಬೈಲ್ ಆ್ಯಪ್ ಮೂಲಕ ನಿಖರವಾದ ಬೆಳೆ ವಿವರಗಳನ್ನು ದಾಖಲಿಸುವ ಬಗ್ಗೆ ತರಬೇತಿ ಕಾರ್ಯಕ್ರಮವನ್ನು 27-06-2026 ಯಶಸ್ವಿಯಾಗಿ ಆಯೋಜಿಸಲಾಯಿತು.
ಈ ಮಹತ್ವದ ಕಾರ್ಯಕ್ರಮವನ್ನು ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಇವರ ಅಧ್ಯಕ್ಷತೆಯಲ್ಲಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಮತಿ ಕ್ಷಮಾ ಪಾಟೀಲ್ ಹಾಗೂ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ನಿಧೀಶ್ ಹೊಳ್ಳ ಅವರು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉಡುಪಿ TAPCMS ನ ನಿರ್ದೇಶಕರಾದ ಶ್ರೀ ಶ್ರೀಧರ್ ವಿ ಶೆಟ್ಟಿ ಆರೂರು, ಸಂಘದ ನಿರ್ದೇಶಕರು, ಆಡಳಿತ ನಿರ್ದೇಶಕರು, ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕರ್ನಾಟಕ ಸರ್ಕಾರವು ರೈತರ ಅನುಕೂಲಕ್ಕಾಗಿ ಬಿಡುಗಡೆ ಮಾಡಿರುವ ಅಧಿಕೃತ ‘ರೈತರ ಬೆಳೆ ಸಮೀಕ್ಷೆ 2026-27’ ಮೊಬೈಲ್ ಆ್ಯಪ್ ಅನ್ನು ರೈತರು ಸುಲಭವಾಗಿ ಬಳಸುವಂತೆ ಮಾಡಲು ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಸಂಘದಿಂದ ಆಯ್ಕೆಯಾದ ಉತ್ಸಾಹಿ ಯುವಕ ಯುವತಿಯರು ಈ ಆ್ಯಪ್ ಮೂಲಕ ರೈತರ ಜಮೀನಿನ ಬೆಳೆ ವಿವರಗಳನ್ನು ಯಾವುದೇ ತಪ್ಪುಗಳಿಲ್ಲದೆ, ಅತ್ಯಂತ ನಿಖರವಾಗಿ ನಮೂದಿಸುವ ಕುರಿತು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದರು. ಅದರಂತೆ ಕಾರ್ಯವ್ಯಾಪ್ತಿಯ ರೈತ ಸದಸ್ಯರಿಗೆ ಬೆಳೆ ನಮೂದು ಮಾಡುವ ಬಗ್ಗೆ ಸಹಕರಿಸುವಂತೆ ಪ್ರೇರೇಪಿಸಲಾಗಿದೆ.
ಡಿಜಿಟಲ್ ದಾಖಲಾತಿಗಳು ನಿಖರವಾಗಿದ್ದಾಗ ಮಾತ್ರ ರೈತರಿಗೆ ಸರ್ಕಾರದ ಸೌಲಭ್ಯಗಳು, ಬೆಳೆ ವಿಮೆ ಹಾಗೂ ಪರಿಹಾರ ಯಾವುದೇ ವಿಳಂಬವಿಲ್ಲದೆ ತಲುಪಲು ಸಾಧ್ಯವಾಗುತ್ತದೆ ಎಂದು ಶ್ರೀಮತಿ ಕ್ಷಮಾ ಪಾಟೀಲ್ ಜಂಟಿ ನಿರ್ದೇಶಕರು ಈ ಸಂದರ್ಭದಲ್ಲಿ ಅನಿಸಿಕೆ ವ್ಯಕ್ತಪಡಿಸಿದರು.
ಪ್ರತಿಬಾರಿ ಬೆಳೆ ವಿಮೆಯಂತಹ ಉತ್ತಮ ಯೋಜನೆಗೆ ಕಾರ್ಯವ್ಯಾಪ್ತಿಯ ರೈತರ ಬೆಳೆಗಳನ್ನು ಸೇರಿಸಲು ಬೆಳೆ ಸಮೀಕ್ಷೆಯ ದಾಖಲೆಗಳಲ್ಲಿನ ಲೋಪ ನೇರವಾಗಿ ಕಾರಣವಾಗಿ ಹಲವು ರೈತರು ಯೋಜನೆಯಿಂದ ಪ್ರತೀ ಬಾರಿ ವಂಚಿತರಾಗುವುದು ಸಂಘದ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದು, ಈ ಬಗ್ಗೆ ಬೆಳೆ ಸಮೀಕ್ಷೆಗೆ ರೈತರಿಗೆ ನೀಡಲಾದ ಅವಕಾಶದಲ್ಲಿ ಅವರಿಗೆ ಸರಿಯಾದ ಸಹಕಾರ, ಮಾರ್ಗದರ್ಶನ ನೀಡಿ ಮಿಶ್ರ ಬೆಳೆಗಳನ್ನು ಒಳಗೊಂಡಂತೆ ನೈಜ ಬೆಳೆಯ ಸಮೀಕ್ಷೆಯಾಗುವಂತೆ ನೋಡಿಕೊಳ್ಳಲು ಸದ್ರಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರು ಅವರ ಮಾತಿನಲ್ಲಿ ತಿಳಿಸಿದರು.
ಪ್ರಾಯೋಗಿಕ ಪ್ರಾತ್ಯಕ್ಷಿಕೆ (Field Visit & Demo):
ಸಭೆಯ ಕಾರ್ಯಕ್ರಮದ ನಂತರ, ಸಂಘದ ಕಾರ್ಯವ್ಯಾಪ್ತಿಯ ಕೃಷಿಕರೊಬ್ಬರ ತೋಟಕ್ಕೆ ಅಧಿಕಾರಿಗಳು ಮತ್ತು ತರಬೇತಿ ನಿರತರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸದರಿ ‘ರೈತರ ಬೆಳೆ ಸಮೀಕ್ಷೆ 2026-27’ ಮೊಬೈಲ್ ಆ್ಯಪ್ ಅನ್ನು ಪ್ರಾಯೋಗಿಕವಾಗಿ ಉಪಯೋಗಿಸಿ, ಜಿಪಿಎಸ್ ಆಧಾರಿತ ಬೆಳೆ ನಮೂದನ್ನು ಅತ್ಯಂತ ನಿಖರವಾಗಿ ಹೇಗೆ ಮಾಡಬೇಕು ಎಂಬ ಬಗ್ಗೆ ಆಸಕ್ತ ಯುವಕ ಯುವತಿಯರಿಗೆ ಸ್ಥಳದಲ್ಲೇ ಸವಿಸ್ತಾರವಾದ ಪ್ರಾತ್ಯಕ್ಷಿಕೆಯನ್ನು ನೀಡಿ ಮನವರಿಕೆ ಮಾಡಿಕೊಡಲಾಯಿತು.
ತರಬೇತಿ ಪಡೆದ ಈ ಯುವಕರು ಸಂಘದ ಕಾರ್ಯವ್ಯಾಪ್ತಿಯ ಬೆಳೆಸಾಲ ಹೊಂದಿರುವ ರೈತ ಸದಸ್ಯರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ನೆರವಾಗಲಿದ್ದಾರೆ.







