ಮಣಿಪಾಲ್, ಏಪ್ರಿಲ್ 8, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ಐದು ದಿನಗಳ ಪ್ರಮುಖ ಸಾಂಸ್ಕೃತಿಕ ಹಬ್ಬ ‘ಉತ್ಸವ್ 2026’, ಏಪ್ರಿಲ್ 7 ರಂದು ಮಣಿಪಾಲದ ಕೆಎಂಸಿ ಗ್ರೀನ್ಸ್ನಲ್ಲಿ ಅತ್ಯಂತ ಉತ್ಸಾಹ ಮತ್ತು ಸಂಭ್ರಮದೊಂದಿಗೆ ಚಾಲನೆಗೊಂಡಿತು.
ದೀಪ ಬೆಳಗಿಸುವ ಮೂಲಕ ‘ಉತ್ಸವ್ 2026’ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಹೆ ಟ್ರಸ್ಟ್ನ ಟ್ರಸ್ಟಿ ಶ್ರೀಮತಿ ವಸಂತಿ ಆರ್. ಪೈ ಅವರು ಪಾಲ್ಗೊಂಡಿದ್ದರು. ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್, ಮಾಹೆಯ ಸಹ ಕುಲಪತಿಗಳಾದ ಡಾ. ಕೆ. ಶರತ್ ರಾವ್ ಹಾಗೂ ಡಾ. ನಾರಾಯಣ ಸಭಾಹಿತ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕಿ ಡಾ. ಗೀತಾ ಮಯ್ಯ ಅವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾಹೆ ಸಿಸಿಬಿ ಅಧ್ಯಕ್ಷರಾದ ಡಾ. ಶೋಭಾ ಯು. ಕಾಮತ್ ಮತ್ತು ಕಾರ್ಯದರ್ಶಿ ಡಾ. ಮೋಹನ್ ದಾಸ್ ರಾವ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅವರು, ʼಈ ಉತ್ಸವವು ಸಾಂಸ್ಕೃತಿಕ ವೈವಿಧ್ಯತೆಯನ್ನು ಸಂಭ್ರಮಿಸುವ ಜತೆಗೆ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ಒಗ್ಗಟ್ಟಿನ ಭಾವನೆಯನ್ನು ಮೂಡಿಸುವ ಒಂದು ಮಹತ್ವದ ವೇದಿಕೆಯಾಗಿದೆʼ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ ಲೆ. ಜ. (ಡಾ.) ವೆಂಕಟೇಶ್ ಅವರು ಶೈಕ್ಷಣಿಕ ಕಾರ್ಯಕ್ರಮಗಳಷ್ಟೇ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಮಾಹೆ ಒತ್ತು ನೀಡುತ್ತದೆ ಎಂದರು.
ಈ ಬಾರಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಈ ಹಬ್ಬದಲ್ಲಿ ಭಾಗಿಯಾಗಿದ್ದು,. ಮಣಿಪಾಲ್ ಹೈಯರ್ ಎಜುಕೇಶನ್ ಸಮೂಹದ ಒಟ್ಟು 27 ಸಂಸ್ಥೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 38 ವಿವಿಧ ಸ್ಪರ್ಧೆಗಳಲ್ಲಿ 1,700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 300ಕ್ಕೂ ಅಧಿಕ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಳ್ಳುತ್ತಿರುವುದು ಈ ಕಾರ್ಯಕ್ರಮದ ವಿಸ್ತಾರ ಮತ್ತು ಒಳಗೊಳ್ಳುವಿಕೆಗೆ ಸಾಕ್ಷಿಯಾಗಿದೆ.
ಬೋಧಕ ಮತ್ತು ಸಿಬ್ಬಂದಿ ವರ್ಗದವರಿಗಾಗಿ ಆಯೋಜಿಸಲಾಗಿದ್ದ ‘ಸಿಬ್ಬಂದಿ ಉತ್ಸವ’ವು ಈ ಸಾಂಸ್ಕೃತಿಕ ಹಬ್ಬಕ್ಕೆ ಸಂಭ್ರಮದ ಮುನ್ನುಡಿ ಬರೆಯಿತು. ತರಕಾರಿ ಮತ್ತು ಹಣ್ಣುಗಳ ಕೆತ್ತನೆ ಸ್ಪರ್ಧೆ ಹಾಗೂ ವಿವಿಧ ಮನೋರಂಜನಾ ಪ್ರದರ್ಶನಗಳಲ್ಲಿ ಸಿಬ್ಬಂದಿಗಳು ಬಹಳ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆ ಮತ್ತು ಒಗ್ಗಟ್ಟನ್ನು ಪ್ರದರ್ಶಿಸಿದರು.
ಐದು ದಿನಗಳ ಕಾಲ ನಡೆಯುವ ಈ ಸಂಭ್ರಮದಲ್ಲಿ ಸಂಗೀತ, ನೃತ್ಯ, ಸಾಹಿತ್ಯ ಮತ್ತು ಕಲೆಗೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳು ನಡೆಯಲಿವೆ. ರಂಗೋಲಿ, ರಸಪ್ರಶ್ನೆ, ಮೂಕಾಭಿನಯ, ಫ್ಯಾಶನ್ ಶೋ ಹಾಗೂ ಗಾಯನ ಸ್ಪರ್ಧೆಗಳು ಈ ಹಬ್ಬದ ಮುಖ್ಯ ಆಕರ್ಷಣೆಗಳಾಗಿವೆ. ಏಪ್ರಿಲ್ 10 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು.
ಮಣಿಪಾಲ್, ಮಂಗಳೂರು, ಬೆಂಗಳೂರು ಮಾತ್ರವಲ್ಲದೆ ಜೈಪುರ ಮತ್ತು ಮಲೇಷ್ಯಾದ ಮಣಿಪಾಲ್ ಕ್ಯಾಂಪಸ್ಗಳ ವಿದ್ಯಾರ್ಥಿಗಳು ಸಹ ಈ ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಇದು ವಿವಿಧ ಪ್ರದೇಶಗಳ ವಿದ್ಯಾರ್ಥಿಗಳ ನಡುವೆ ಸಾಂಸ್ಕೃತಿಕ ವಿನಿಮಯ ಮತ್ತು ಒಗ್ಗಟ್ಟಿನ ಭಾವನೆಯನ್ನು ಪ್ರಚುರ ಪಡಿಸುತ್ತದೆ. ʼಉತ್ಸವ್ 2026′ ಕೇವಲ ಒಂದು ಹಬ್ಬವಲ್ಲ, ಇದು ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಮತ್ತು ಸಾಂಸ್ಕೃತಿಕ ಏಕತೆಯ ಪ್ರತಿರೂಪವಾಗಿದೆ. ಮಾಹೆಯ ಆಶಯಗಳನ್ನು ಹಾಗೂ ವಿದ್ಯಾರ್ಥಿಗಳ ಚೈತನ್ಯವನ್ನು ಈ ಸಾಂಸ್ಕೃತಿಕ ಹಬ್ಬ ಪ್ರತಿಬಿಂಬಿಸುತ್ತದೆ.







