ಮಂಗಳೂರು, ಮಾ.12: ಟ್ರೇಡಿಂಗ್ ವ್ಯವಹಾರದ ನೆಪದಲ್ಲಿ ಯುವಕನ ಬ್ಯಾಂಕ್ ಖಾತೆಯ ದಾಖಲೆಗಳನ್ನು ಪಡೆದು, ಅದನ್ನು ಸೈಬರ್ ವಂಚನೆಗೆ ಬಳಸಿಕೊಂಡಿರುವುದರ ಜೊತೆಗೆ ಹಣಕ್ಕಾಗಿ ಬೆದರಿಕೆ ಹಾಕಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಮೊಹಮ್ಮದ್ ಅನೀಶ್ ಹಾಗೂ ಸಲೀತ್ ಅಹಮ್ಮದ್ ಎಂ. ವಿರುದ್ಧ ದೂರು ದಾಖಲಾಗಿದೆ.
ಪ್ರಕರಣದ ವಿವರ:
ಬಿಜೈ ಕಾಪಿಕಾಡ್ನ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ 27 ವರ್ಷದ ಯುವಕನಿಗೆ ಉಳಿತಾಯ ಖಾತೆ ಇದ್ದು, ಟ್ರೇಡಿಂಗ್ ವ್ಯವಹಾರಕ್ಕೆ ಹಣ ವರ್ಗಾವಣೆ ಮಾಡಲು ಬ್ಯಾಂಕ್ ಖಾತೆ ಅಗತ್ಯವಿದೆ ಎಂದು ಹೇಳಿ ಆರೋಪಿಗಳಾದ ಅನೀಶ್ ಮತ್ತು ಸಲೀತ್ ಅವರು ನಂಬಿಕೆ ಮೂಡಿಸಿದ್ದಾರೆ. ಬಳಿಕ ಫಿರ್ಯಾದಿದಾರರಿಂದ ಬ್ಯಾಂಕ್ ಪಾಸ್ ಬುಕ್, ಚೆಕ್ ಬುಕ್, ಎಟಿಎಂ ಕಾರ್ಡ್ ಹಾಗೂ ಖಾತೆಗೆ ಲಿಂಕ್ ಆಗಿದ್ದ ಸಿಮ್ ಕಾರ್ಡ್ ಅನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಖಾತೆ ಫ್ರೀಜ್ ಆಗಿ ವಂಚನೆ ಬೆಳಕಿಗೆ:
ಕೆಲ ದಿನಗಳ ಬಳಿಕ ಅನುಮಾನಗೊಂಡ ಯುವಕ ಬ್ಯಾಂಕ್ಗೆ ತೆರಳಿ ವಿಚಾರಿಸಿದಾಗ, ಅವರ ಖಾತೆ ಮೇಲೆ ವಿವಿಧ ರಾಜ್ಯಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿರುವುದರಿಂದ ಖಾತೆಯನ್ನು ಫ್ರೀಜ್ ಮಾಡಲಾಗಿದೆ ಎಂಬುದು ತಿಳಿದುಬಂದಿದೆ.
ಈ ಕುರಿತು ಆರೋಪಿಗಳನ್ನು ಪ್ರಶ್ನಿಸಿದಾಗ, ಅವರು ಬ್ಯಾಂಕ್ ದಾಖಲೆಗಳನ್ನು ಹಿಂತಿರುಗಿಸಲು ನಿರಾಕರಿಸಿ, ಬದಲಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. “ನೀನೇ ನಮಗೆ ಖಾತೆ ನೀಡಿದ್ದೀಯ ಎಂದು ಪೊಲೀಸರಿಗೆ ದೂರು ನೀಡುತ್ತೇವೆ” ಎಂದು ಹೆದರಿಸಿ, ಪ್ರಕರಣವನ್ನು ಮುಚ್ಚಿಹಾಕಲು 10 ಸಾವಿರ ರೂ. ಹಣ ನೀಡುವಂತೆ ಒತ್ತಾಯಿಸಿದ್ದಾರೆಯೆಂದು ಆರೋಪಿಸಲಾಗಿದೆ.
ಅದೇ ರೀತಿ ಬ್ಯಾಂಕ್ ದಾಖಲೆಗಳನ್ನು ಮರಳಿ ಕೇಳಿದರೆ ಜೀವಕ್ಕೆ ಅಪಾಯ ಉಂಟುಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಫಿರ್ಯಾದಿದಾರರು ತಿಳಿಸಿದ್ದಾರೆ. ಇನ್ನು ಆರೋಪಿಗಳು ಇತರ ಸೈಬರ್ ಅಪರಾಧಿಗಳೊಂದಿಗೆ ಕೈಜೋಡಿಸಿ ಲಕ್ಷಾಂತರ ರೂಪಾಯಿ ವಂಚನೆ ಹಣವನ್ನು ಈ ಖಾತೆಯ ಮೂಲಕ ವರ್ಗಾವಣೆ ಮಾಡಿರುವ ಶಂಕೆ ವ್ಯಕ್ತವಾಗಿದೆ.







