ಉಡುಪಿ, ಮಾ.10: ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಟಿ20 ವಿಶ್ವಕಪ್ ಕಿರೀಟವನ್ನು ಭಾರತ ಕ್ರಿಕೆಟ್ ತಂಡ ಮತ್ತೊಮ್ಮೆ ತನ್ನದಾಗಿಸಿಕೊಂಡಿದೆ. ಸತತ ಎರಡನೇ ಬಾರಿ ಟ್ರೋಫಿ ಗೆದ್ದು ತಂಡ ಹೊಸ ಇತಿಹಾಸ ನಿರ್ಮಿಸಿದೆ. ಈ ನಡುವೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದೊಂದಿಗೆ ವಿಶೇಷ ಆಧ್ಯಾತ್ಮಿಕ ನಂಟು ಇರುವುದರಿಂದ, ಅವರ ಹೆಸರಿನಲ್ಲಿ ಕಾಪು ಕ್ಷೇತ್ರದಲ್ಲಿ ವಿಶೇಷ ಪೂಜಾ ವಿಧಿಗಳ ಸಿದ್ಧತೆಗಳು ನಡೆಯುತ್ತಿವೆ.
ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಲದವರು. ಅವರ ಕುಟುಂಬ ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದರೂ, ಕಾಪುವಿನ ಹೊಸ ಮಾರಿಯಮ್ಮ ದೇವಸ್ಥಾನವು ಕುಟುಂಬದ ಆರಾಧ್ಯ ದೈವಸ್ಥಳವಾಗಿದೆ. ಸೂರ್ಯಕುಮಾರ್ ಯಾದವ್ ಹಾಗೂ ದೇವಿಶಾ ಶೆಟ್ಟಿ ದಂಪತಿ ಈಗಾಗಲೇ ಎರಡು ಬಾರಿ ಕಾಪು ಮಾರಿಗುಡಿಗೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದಾರೆ.
2024ರ ಜುಲೈ 9ರಂದು ಅವರು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ದೇವಾಲಯಕ್ಕೆ ಕಂಬವನ್ನು ದಾನವಾಗಿ ನೀಡಿದ್ದರು. ವಿಶೇಷವೆಂದರೆ, ಆ ಭೇಟಿಯ ನಂತರ ಕೇವಲ ಒಂಬತ್ತು ದಿನಗಳಲ್ಲೇ ಜುಲೈ 18ರಂದು ಸೂರ್ಯಕುಮಾರ್ ಯಾದವ್ ಅವರನ್ನು ಭಾರತೀಯ ಟಿ20 ಕ್ರಿಕೆಟ್ ತಂಡದ ನಾಯಕನಾಗಿ ಘೋಷಿಸಲಾಗಿತ್ತು.
ಆ ವೇಳೆ ದೇವಸ್ಥಾನದ ಅರ್ಚಕರು ದೇವಿಯ ಸನ್ನಿಧಿಯಲ್ಲಿ ಸೂರ್ಯಕುಮಾರ್ ಯಾದವ್ ಮುಂದಿನ ದಿನಗಳಲ್ಲಿ ಭಾರತ ತಂಡದ ನಾಯಕನಾಗಲಿ ಎಂದು ಆಶೀರ್ವದಿಸಿದ್ದರು. ಈಗ ಅವರ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದಿರುವ ಹಿನ್ನೆಲೆ, ದೇವಸ್ಥಾನದ ಪ್ರಮುಖರು ದಂಪತಿ ಮತ್ತೆ ಕ್ಷೇತ್ರಕ್ಕೆ ಭೇಟಿ ನೀಡಬೇಕು ಎಂಬ ಸಂಕಲ್ಪ ಮಾಡಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ದೇವಿಗೆ ಬೆಲ್ಲ ಮತ್ತು ಸಕ್ಕರೆಯ ತುಲಾಭಾರ ಸಮರ್ಪಿಸುವ ಸಂಕಲ್ಪವನ್ನೂ ಭಕ್ತರು ಮಾಡಿಕೊಂಡಿದ್ದಾರೆ.







