ಮಲ್ಪೆ, ಮಾ. 4: ಪ್ರೇಮ ಸಂಬಂಧದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ತೆರಳಿದ್ದ ಸಂದರ್ಭದಲ್ಲಿ ಹಿಂದುತ್ವ ಸಂಘಟನೆಯ ಮುಖಂಡ ಹಾಗೂ ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಅವರ ಪತಿ ಮಂಜು ಕೊಳ ಮೇಲೆ ಚಾಕು ದಾಳಿ ನಡೆದ ಘಟನೆ ಮಂಗಳವಾರ ರಾತ್ರಿ ಮಲ್ಪೆಯಲ್ಲಿ ಸಂಭವಿಸಿದೆ.
ಪೊಲೀಸ್ ಮಾಹಿತಿಯಂತೆ, ಮಲ್ಪೆ ಬೀಚ್ ಸಮೀಪದ ಪಲಿಮಾರು ಭಾಗದಲ್ಲಿ ಜೋಡಿಯೊಂದರ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ರಾಜಿ ಮಾತುಕತೆ ನಡೆಸಲು ಮಂಜು ಕೊಳ ಅವರನ್ನು ಕರೆಯಲಾಗಿತ್ತು. ಸಭೆಯ ವೇಳೆ ಮಾತಿನ ಚಕಮಕಿ ಉಂಟಾಗಿ ವಾಗ್ವಾದ ತೀವ್ರಗೊಂಡಿದೆ. ಇದೇ ವೇಳೆ ಯುವಕನೊಬ್ಬ ಮಂಜು ಕೊಳ ಅವರ ಹೊಟ್ಟೆ ಭಾಗಕ್ಕೆ ಚೂರಿಯಿಂದ ಇರಿದಿದ್ದಾನೆ ಎನ್ನಲಾಗಿದೆ.
ಗಾಯಗೊಂಡ ಮಂಜು ಕೊಳ ತಕ್ಷಣ ನೆಲಕ್ಕುರುಳಿದ್ದು, ಅವರನ್ನು ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಮಾಹಿತಿ ಪ್ರಕಾರ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ಘಟನೆ ವೈಯಕ್ತಿಕ ಕಾರಣಗಳಿಂದ ನಡೆದಿದ್ದು, ಇದಕ್ಕೆ ಯಾವುದೇ ಕೋಮು ಹಿನ್ನೆಲೆ ಇಲ್ಲವೆಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಸ್ಪಷ್ಟಪಡಿಸಿದ್ದಾರೆ. ವದಂತಿಗಳಿಗೆ ಅವಕಾಶ ನೀಡದಂತೆ ಸಾರ್ವಜನಿಕರಿಗೆ ಅವರು ಮನವಿ ಮಾಡಿದ್ದಾರೆ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.







