ಉಡುಪಿ, ಫೆ. 18:ಮಲ್ಪೆ ಕೊಚ್ಚಿನ್ ಶಿಪ್ಯಾರ್ಡ್ನ ಕೆಲ ನೌಕರರು ಭಾರತೀಯ ನೌಕಾಸೇನೆಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಪಾಕಿಸ್ಥಾನಕ್ಕೆ ಅನಧಿಕೃತವಾಗಿ ಹಂಚಿಕೊಂಡು ಅಕ್ರಮ ಲಾಭ ಪಡೆದಿರುವ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.
ಪಶ್ಚಿಮ ಬಂಗಾಳ ಮೂಲದ ಹಾಗೂ ಪ್ರಸ್ತುತ ಕೇರಳದ ಇಡುಕಿ ಜಿಲ್ಲೆಯ ಮರಾಯು ಗ್ರಾಮದಲ್ಲಿ ವಾಸವಾಗಿದ್ದ ಆಲಿಫ್ ಇಸ್ಲಾಮ್ (21) ಬಂಧಿತ ಆರೋಪಿ.
ಈ ಪ್ರಕರಣದಲ್ಲಿ ಈ ಹಿಂದೆ 2025 ಡಿಸೆಂಬರ್ 21ರಂದು ಗುಜರಾತ್ನ ಹೀರೇಂದ್ರ ಕುಮಾರ್ ಹಾಗೂ 2025 ನವೆಂಬರ್ 21ರಂದು ಉತ್ತರ ಪ್ರದೇಶದ ರೋಹಿತ್ ಮತ್ತು ಸಂತ್ರಿ ಅವರನ್ನು ಬಂಧಿಸಲಾಗಿತ್ತು.
ಇವರೆಲ್ಲರು ಭಾರತೀಯ ನೌಕಾಸೇನೆಗೆ ಸಂಬಂಧಿಸಿದ ಹಡಗುಗಳ ಸಂಖ್ಯೆಪಟ್ಟಿ ಸೇರಿದಂತೆ ಹಲವು ಗೌಪ್ಯ ಮಾಹಿತಿಗಳನ್ನು ವಾಟ್ಸಾಪ್ ಮತ್ತು ಫೇಸ್ಬುಕ್ ಮೂಲಕ ಪಾಕಿಸ್ಥಾನಕ್ಕೆ ರವಾನಿಸಿ ಅಕ್ರಮ ಲಾಭ ಪಡೆದಿದ್ದಾರೆ ಎಂಬ ಆರೋಪದಡಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆಯನ್ನು ಮುಂದುವರಿಸಿದ ಪೊಲೀಸರು ಫೆಬ್ರವರಿ 16ರಂದು ಆಲಿಫ್ ಇಸ್ಲಾಮ್ ಅವರನ್ನು ಬಂಧಿಸಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈತನನ್ನು ಪ್ರಕರಣದ ಐದನೇ ಆರೋಪಿಯಾಗಿ ಪರಿಗಣಿಸಲಾಗಿದ್ದು, ಮೂರನೇ ಆರೋಪಿ ಇನ್ನೂ ಬಂಧನವಾಗಬೇಕಿದೆ. ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತನು ಬಾಂಗ್ಲಾದೇಶದ ಪ್ರಜೆಯಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದು, ಇದರ ಬಗ್ಗೆ ದೃಢಪಟ್ಟ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.







