ಕಾರ್ಕಳ:ಫೆಬ್ರವರಿ 11: ಮಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಿವು ಕೇಂದ್ರದ ವತಿಯಿಂದ ಪಂಚಾಯತ್ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮಾಳ ಇಲ್ಲಿನ ಸಭಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಂಚಾಯತ್ ಅಧ್ಯಕ್ಷರಾದ ಉಮೇಶ್ ಪೂಜಾರಿ ಅವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಖಾ ಆಚಾರ್ಯ, ಶಾಲಾ ಸಂಚಾಲಕರಾದ ಸುಧಾಕರ ಡೋಂಗ್ರೆ, ಪಂಚಾಯತ್ ಉಪಾಧ್ಯಕ್ಷರಾದ ವಿಮಲ ಪೂಜಾರಿ, ಅರಿವು ಕೇಂದ್ರದ ಸಲಹಾ ಸಮಿತಿಯ ಸದಸ್ಯ ಹಾಗೂ ಹಿರಿಯರಾದ ಶ್ರೀರಂಗ ಜೋಶಿ, ಸಮೂಹ ಸಂಪನ್ಮೂಲ ವ್ಯಕ್ತಿ ಕೃಷ್ಣಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಪೂರ್ಣಿಮಾ ಶೆಣೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸ್ಪರ್ಧೆಗಳು ಮೂರು ವಿಭಾಗಗಳಲ್ಲಿ ನಡೆದಿದ್ದು, ಪ್ರಾಥಮಿಕ ಶಾಲಾ ಮಕ್ಕಳು, ಪ್ರೌಢಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗಾಗಿ ದೇಶಭಕ್ತಿ ಗೀತೆ, ಭಕ್ತಿ ಗೀತೆ, ಜನಪದ ಗೀತೆ ಮತ್ತು ಭಾವಗೀತೆ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದಿಂದ ಸುಮಾರು 116 ವಿದ್ಯಾರ್ಥಿಗಳು ಭಾಗವಹಿಸಿದ್ದು, ಸಾರ್ವಜನಿಕ ವಿಭಾಗದಲ್ಲಿ ಸುಮಾರು 20 ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಅರಿವು ಕೇಂದ್ರಕ್ಕೆ ನಿರಂತರವಾಗಿ ಭೇಟಿ ನೀಡಿ ಉತ್ತಮ ಓದುಗಾರರಾಗಿ ಗುರುತಿಸಿಕೊಂಡ ಕೆ.ಎಸ್. ವೆಂಕಟೇಶ್ ಅವರನ್ನು ಈ ಸಂದರ್ಭ ಗೌರವಿಸಲಾಯಿತು. ಬಹುಮಾನದ ವಿಜೇತರ ಪಟ್ಟಿಯನ್ನು ಪಂಚಾಯತ್ ಕಾರ್ಯದರ್ಶಿ ಸವಿತ ಕುಮಾರಿ ವಾಚಿಸಿದರು. ಕಾರ್ಯಕ್ರಮದ ಯಶಸ್ಸಿಗೆ ವಸಂತಿ ಹಾಗೂ ಪಂಚಾಯತ್ನ ಎಲ್ಲಾ ಸಿಬ್ಬಂದಿ ವರ್ಗದವರು ಸಹಕಾರ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಸುಧೀರ್ ಶೆಟ್ಟಿ ನಡೆಸಿ, ಗ್ರಂಥಪಾಲಕಿ ಗೀತಾ ಸೇರಿಗಾರ್ ವಂದನಾರ್ಪಣೆಗೈದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ವಿವಿಧ ಹೂಗಳ ಗಿಡಗಳನ್ನು ನೀಡಲಾಯಿತು.







