ಪಡುಬಿದ್ರಿ, ಫೆ. 11: ಮಂಗಳವಾರ ಪುರಸಭೆ ಕಟ್ಟಡದಲ್ಲಿರುವ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಅಜಾಗರೂಕತೆಯಿಂದ ಒಳಗೆ ಸಿಲುಕಿದ ಘಟನೆ ನಡೆದಿದೆ.
ಪುರಸಭೆ ಕಟ್ಟಡದಲ್ಲೇ ಯೋಜನಾ ಪ್ರಾಧಿಕಾರದ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಸಾಮಾನ್ಯವಾಗಿ ಪುರಸಭೆ ಸಿಬ್ಬಂದಿ ಸಂಜೆ 5.30ರಿಂದ 6ರೊಳಗೆ ಕಟ್ಟಡದ ಬೀಗ ಹಾಕಿ ತೆರಳುವ ವೇಳೆ, ಪ್ರಾಧಿಕಾರದ ಸಿಬ್ಬಂದಿ ಕೆಲಸದಲ್ಲಿದ್ದರೆ ಅವರಿಗೆ ಮುಂಚಿತವಾಗಿ ಮಾಹಿತಿ ನೀಡುವ ವ್ಯವಸ್ಥೆಯಿದೆ.
ಆದರೆ ಮಂಗಳವಾರ ಬೀಗ ಹಾಕುವ ಜವಾಬ್ದಾರಿಯಲ್ಲಿದ್ದ ಸಿಬ್ಬಂದಿ ಬೇಗನೆ ಮನೆಗೆ ತೆರಳಿದ್ದು, ಪ್ರಥಮ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಧಿಕಾರದ ಸಿಬ್ಬಂದಿ ಬಗ್ಗೆ ಗಮನಕೊಡದೆ ಮುಖ್ಯದ್ವಾರಕ್ಕೆ ಬೀಗ ಹಾಕಿ ತೆರಳಿದ್ದಾರೆ. ನಂತರ ಪ್ರಾಧಿಕಾರದ ಸಿಬ್ಬಂದಿ, ಸಾರ್ವಜನಿಕರು ಕೆಲಸ ಮುಗಿಸಿ ತೆರಳಲು ಮುಂದಾದಾಗ ಮುಖ್ಯಬಾಗಿಲಿಗೆ ಬೀಗ ಹಾಕಿರುವುದು ಗಮನಕ್ಕೆ ಬಂದಿದೆ. ಕೆಲಕಾಲ ಗೊಂದಲ, ಆತಂಕದ ವಾತಾವರಣ ನಿರ್ಮಾಣವಾಯಿತು. ಕೆಲವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಕ್ರಮ ಕೈಗೊಂಡು, ಬೀಗ ಹಾಕಿ ತೆರಳಿದ್ದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಬಾಗಿಲು ತೆರೆಯುವ ವ್ಯವಸ್ಥೆ ಮಾಡಿದರು.







