ಮಂಗಳೂರು, ಫೆ. 11: ಮ್ಯಾಟ್ರಿಮೋನಿ ವೆಬ್ಸೈಟ್ ಮೂಲಕ ಪರಿಚಯಗೊಂಡ ಮಹಿಳೆಯನ್ನು ಮಹಾರಾಷ್ಟ್ರದ ನವಿ ಮುಂಬಯಿಯ ಘನಸೋಳಿಯಲ್ಲಿ ಮದುವೆಯಾಗಿ, ಹಂತ ಹಂತವಾಗಿ 6.60 ಲಕ್ಷ ರೂ. ಹಣ ಪಡೆದು ನಾಪತ್ತೆಯಾಗಿದ್ದ ಆರೋಪಿ ಹಾಗೂ ಅವನಿಗೆ ಸಹಾಯ ಮಾಡಿದ್ದ ಮತ್ತೊಬ್ಬನನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸುಶಾಂತ್ ಪೂಜಾರಿ ಅಲಿಯಾಸ್ ಸುಶಾಂತ್ ಅಂಕುಶ್ ಪೂಜಾರಿ ಅಲಿಯಾಸ್ ಸುಶಾಂತ್ ಜಿ. ಕರ್ಕೇರಾ (32) ಹಾಗೂ ಮೂಲ್ಕಿ ನಿವಾಸಿ ಭಾಸ್ಕರ್ (53) ಎಂದು ಗುರುತಿಸಲಾಗಿದೆ.
2025ರ ಫೆ.2ರಂದು ಮಂಗಳೂರು ಮೂಲದ ದೂರುದಾರ ಮಹಿಳೆಯನ್ನು ಆರೋಪಿ ಸುಶಾಂತ್ ಮದುವೆಯಾಗಿದ್ದಾನೆ. ಬಳಿಕ ಅವರಿಂದ ಹಂತ ಹಂತವಾಗಿ 6.60 ಲಕ್ಷ ರೂ. ಹಣ ಪಡೆದು ನ.15ರಂದು ಹಠಾತ್ ನಾಪತ್ತೆಯಾಗಿದ್ದ. ಈ ಬಗ್ಗೆ ಅನುಮಾನಗೊಂಡು ವಿಚಾರಿಸಿದಾಗ ಹಲವೆಡೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿರುವುದು ಹಾಗೂ ಈ ಮೊದಲು ಒಂದು ಮದುವೆಯಾಗಿರುವ ಬಗ್ಗೆ ತಿಳಿದು ಬಂದಿದೆ. ಕಾವೂರು ಠಾಣೆಗೆ ದೂರು ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಫೆ.5ರಂದು ಆತನನ್ನು ಬಂಧಿಸಿದ್ದಾರೆ.
ಹಲವರಿಗೆ ವಂಚನೆ:
2021ರಲ್ಲಿ ಉಡುಪಿಯ ಇಬ್ಬರು ಹುಡುಗಿಯರು ಹಾಗೂ ಮುಂಬಯಿನ ಇಬ್ಬರು ಹುಡುಗಿಯರಿಂದ ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವ ಬಗ್ಗೆ ಹಾಗೂ ಬೆಂಗಳೂರಿನಲ್ಲಿ ಇಬ್ಬರು ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ತಿಳಿಸಿದ್ದಾನೆ. ಮಾತ್ರವಲ್ಲದೆ ಕಾರ್ಕಳದ ಓರ್ವ ಹುಡುಗಿಗೂ ಮದುವೆ ಆಗುವುದಾಗಿ ನಂಬಿಸಿ ಮೊಸ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಸಹಕರಿಸಿದಾತನ ಬಂಧನ:
ಮುಂಬಯಿನ ಮಹಿಳೆಗೆ ಮತ್ತು ಆಕೆ ಕುಟುಂಬದವರಿಗೆ ಸುಶಾಂತ್ ತನ್ನ ಅಳಿಯ ಎಂದು ಹೇಳಿಕೊಂಡು ನಂಬಿಸಿದ್ದ ಮೂಲ್ಕಿ ನಿವಾಸಿ ಭಾಸ್ಕರ್ ಎಂಬಾತನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಶಾಂತ್ ಪೂಜಾರಿಯ ಕುಟುಂಬಸ್ಥರ ಪರವಾಗಿ ಮುಂಬಯಿಯಲ್ಲಿನಡೆದ ಮದುವೆಯಲ್ಲಿ ಭಾಸ್ಕರ್ ಪಾಲ್ಗೊಂಡು ಮದುವೆ ನಡೆಸಿದ್ದ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
ವಿವಿಧ ಠಾಣೆಗಳಲ್ಲಿ ಪ್ರಕರಣ:
ಸುಶಾಂತ್ ಪೂಜಾರಿ ವಿರುದ್ದ ಮಂಗಳೂರು ಉರ್ವ ಪೊಲೀಸ್ ಠಾಣೆ, ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾತ್ರವಲ್ಲದೆ ಮಹಾರಾಷ್ಟ್ರ ರಾಜ್ಯದ ಅರ್ನಾಲ್ ಪೊಲೀಸ್ ಠಾಣೆಯಲ್ಲಿ ಮಾನವಕಳ್ಳಸಾಗಣೆ ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲೂ ಪ್ರಕರಣ ದಾಖಲಾಗಿವೆ.







