ಉಡುಪಿ ಫೆ. 04: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೂಲಕ ಸಾಗುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಅಪಘಾತಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು, ಇದು ಸಾರ್ವಜನಿಕರಲ್ಲಿ ಭಯ ಹಾಗೂ ಅಸುರಕ್ಷಿತ ಭಾವನೆಗೆ ಕಾರಣವಾಗುತ್ತಿದೆ. ಇತ್ತೀಚಿನ ಕೆಲವು ತಿಂಗಳುಗಳಲ್ಲೇ ಹೆದ್ದಾರಿಗಳು ಹಾಗೂ ಇತರ ಪ್ರಮುಖ ರಸ್ತೆಗಳಲ್ಲಿ ನಡೆದ ಅಪಘಾತಗಳಲ್ಲಿ ಅನೇಕ ಅಮೂಲ್ಯ ಜೀವಗಳು ಕಳೆದುಹೋಗಿದ್ದು, ರಸ್ತೆ ಸುರಕ್ಷತೆ ಕುರಿತು ಗಂಭೀರ ಆತಂಕ ಮೂಡಿಸಿದೆ.
ಕಳೆದ ಡಿಸೆಂಬರ್ಗೆ ಅಂತ್ಯಗೊಂಡ ಒಂದು ವರ್ಷದಲ್ಲಿ ಉಭಯ ಜಿಲ್ಲೆಗಳಲ್ಲಿ ಒಟ್ಟು 4,026 ಅವಘಡಗಳು ಸಂಭವಿಸಿ, 1,010 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2021ರಲ್ಲಿ 2,199 ಅಪಘಾತದಿಂದ 560 ಸಾವು, 2022ರಲ್ಲಿ3,102 ಅಪಘಾತದಿಂದ 553 ಸಾವು, 2023ರಲ್ಲಿ3,177 ಅಪಘಾತದಲ್ಲಿ 554 ಸಾವು ಹಾಗೂ 2024ರಲ್ಲಿ 3,092 ಅಪಘಾತದಲ್ಲಿ 567 ಮಂದಿ ಸಾವನ್ನಪ್ಪಿದ್ದರು.
ರಾ.ಹೆ.66 ಹಾಗೂ 169 ಎ ಭಾಗ ಸಹಿತ ರಾಜ್ಯ ಹೆದ್ದಾರಿಗಳು, ಉಳಿದ ರಸ್ತೆಗಳು ಮೃತ್ಯುಕೂಪಗಳಾಗುತ್ತಿವೆ. ಅದರಲ್ಲೂ ರಸ್ತೆ ವಿಸ್ತರಣೆ, ಅಂಡರ್ ಪಾಸ್, ಫೈ,,ಓವರ್ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು ದಿನವೂ ಅಪಘಾತಗಳಿಂದ ಸುದ್ದಿಯಾಗು ತ್ತಿವೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ಲಾರಿ ಹಾಗೂ ಭಾರೀ ವಾಹನಗಳ ಅತಿವೇಗ ಅಪಘಾತಗಳಿಗೆ ಕಾರಣವಾಗುತ್ತಿದೆ. ಹೆದ್ದಾರಿ ಕಾಮಗಾರಿಯಿಂದಾಗಿ ರಸ್ತೆ ಇಳಿಜಾರು, ತಿರುವುಗಳು ಹಾಗೂ ಅಚಾನಕ್ ದಿಕ್ಕು ಬದಲಾವಣೆ ಚಾಲಕರಿಗೆ ಸವಾಲಾಗಿ ಪರಿಣಮಿಸಿದೆ. ಹಲವೆಡೆ ಡಿವೈಡರ್ಗಳು ಅಪೂರ್ಣವಾಗಿದ್ದು, ಪಾದಚಾರಿಗಳಿಗೆ ಸುರಕ್ಷಿತ ದಾಟುವ ವ್ಯವಸ್ಥೆಯ ಕೊರತೆ ಕೂಡ ಗಂಭೀರ ಸಮಸ್ಯೆಯಾಗಿದೆ.
ಜನರ ನಿರ್ಲಕ್ಷ್ಯವೂ ಪ್ರಮುಖ ಕಾರಣ
ಪೊಲೀಸ್ ದಾಖಲೆಗಳ ಪ್ರಕಾರ ಅನೇಕ ಅಪಘಾತಗಳಿಗೆ ಜನರ ನಿರ್ಲಕ್ಷÂವೂ ಪ್ರಮುಖ ಕಾರಣ. ಹೆಲ್ಕೆಟ್ ಹಾಗೂ ಸೀಟ್ ಬೆಲ್ಟ್ ಧರಿಸದೆ ವಾಹನ ಚಾಲನೆ, ಮೊಬೈಲ್ ಬಳಕೆ, ಅಸಮರ್ಪಕ ಓವರ್ಟೇಕ್ ಹಾಗೂ ಮದ್ಯಪಾನ ಮಾಡಿ ಚಾಲನೆ ಅಪಘಾತ ಹೆಚ್ಚಿಸುತ್ತಿವೆ.
ತಡೆಗೆ ಕ್ರಮ, ಆದರೂ ಅಪಾಯ
ಅಪಘಾತ ತಡೆಗಾಗಿ ಪೊಲೀಸ್ ಇಲಾಖೆ ಜಾಗೃತಿ ಅಭಿಯಾನ, ತಪಾಸಣೆ ಹಾಗೂ ದಂಡ ವಿಧಿಸುವ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಅಪಘಾತಗಳು ಕಡಿಮೆಯಾಗಿಲ್ಲ. ಅಪಘಾತಗಳು ನಡೆಯುವ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹ.
ರಸ್ತೆ ಸುರಕ್ಷೆಗೆ ಆಗ್ರಹ
ಹೆದ್ದಾರಿ ಅಪಘಾತಗಳನ್ನು ತಡೆಯಲು ವೈಜ್ಞಾನಿಕ ರಸ್ತೆ ವಿನ್ಯಾಸ, ಸ್ಪಷ್ಟ ಸೂಚನೆ ಫಲಕಗಳ ಅಳವಡಿಕೆ, ವೇಗ ನಿಯಂತ್ರಣ ಕೆಮರಾ ಅಳವಡಿಕೆ, ಪಾದಚಾರಿ ಸೇತುವೆಗಳನ್ನು ತ್ವರಿತಗತಿಯಲ್ಲಿ ನಿರ್ಮಿಸುವ ಅಗತ್ಯವಿದೆ. ಹಲವು ಕಡೆಗಳಲ್ಲಿ ಏಕಮುಖ ಸಂಚಾರ ತಪ್ಪಿಸಲು ವಿರುದ್ಧ ಬದಿಯಿಂದ ವಾಹನಗಳು ಸಂಚರಿಸಿ ಅವಘಡ ಸಂಭವಿಸುತ್ತಿವೆ. ರಸ್ತೆಯ ನಡುಭಾಗದಲ್ಲಿ ವಾಹನಗಳು ಕೆಟ್ಟುನಿಂತ ಸಂದರ್ಭ ಸೂಕ್ತ ಮಂಜಾಗ್ರತ ಕ್ರಮ ತೆಗೆದುಕೊಳ್ಳದ ಕಾರಣ ಹಿಂಬದಿಯಿಂದ ಢಿಕ್ಕಿ ಹೊಡೆಯುವಂತಹ ಘಟನೆಗಳೂ ನಡೆಯುತ್ತಿವೆ.
ಹೆದ್ದಾರಿಗಳಲ್ಲಿ ಸುರಕ್ಷೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಹಲವೆಡೆ ಎಚ್ಚರಿಕೆ ಫಲಕ ಸಹಿತ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹಲವೆಡೆ ಕಾಮಗಾರಿ ಗಳು ನಡೆಯುತ್ತಿದ್ದು, ಆಯಕಟ್ಟಿನ ಭಾಗಗ ಳಲ್ಲಿ ಸಿಸಿಟಿವಿ ಕೆಮರಾ ಅಳವಡಿಕೆ ಗುರಿ ಇದೆ. -ಅಬ್ದುಲ್ ಜಾವೇದ್, ಯೋಜನಾ ನಿರ್ದೇಶಕ, ರಾ.ಹೆ.






