ಉಡುಪಿ ಫೆ. 04: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ದೆಹಲಿಯ ಕಚೇರಿಯಲ್ಲಿ ಭೇಟಿಯಾದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬೆಂಗಳೂರಿನಿಂದ ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡದವರೆಗೆ ವಂದೇ ಭಾರತ್ ರೈಲು ವಿಸ್ತರಣೆಯ ಅಗತ್ಯತೆಯನ್ನು ವಿವರಿಸಿದರು.
ಉತ್ತರ ಕನ್ನಡ, ಕುಂದಾಪುರ, ಉಡುಪಿ ಮತ್ತು ಮಂಗಳೂರು ಭಾಗಗಳಿಂದ ಪ್ರತಿದಿನ 600ಕ್ಕೂ ಹೆಚ್ಚು ಬಸ್ಗಳು ಹಾಗೂ ಅನೇಕ ಖಾಸಗಿ ವಾಹನಗಳು ಬೆಂಗಳೂರು ತಲುಪುತ್ತಿವೆ ಎಂದು ಅವರು ಗಮನಕ್ಕೆ ತಂದರು. ನಿತ್ಯ ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ, ಕರಾವಳಿ ಪ್ರದೇಶಕ್ಕೆ ವಂದೇ ಭಾರತ್ ರೈಲು ಸೇವೆ ಆರಂಭಿಸುವಂತೆ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದರು.
ಮಂಗಳೂರಿನಿಂದ ಮುಂಬೈವರೆಗಿನ ಕೊಂಕಣ ರೈಲ್ವೆಯ 734 ಕಿ.ಮೀ ಹಳಿಗಳನ್ನು ದ್ವಿಪಥಗೊಳಿಸುವ ಮೂಲಕ ಹೆಚ್ಚುವರಿ ರೈಲ್ವೆ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಕೂಡಲೇ ಸರ್ವೆ ನಡೆಸಿ ಹಣ ಬಿಡುಗಡೆ ಮಾಡಬೇಕೆಂದು ಕೋರಿದ್ದಾರೆ.
ಹಲವು ವರ್ಷಗಳಿಂದ ಮಂಗಳೂರಿನಿಂದ ಕಾರವಾರದೊರಗಿನ ಕರಾವಳಿ ಜಿಲ್ಲೆಗಳ ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೇವೆಯ ಕೊರತೆ ಇದ್ದು, ಇನ್ನೂ ಹೊಸ ರೈಲುಗಳ ಅಗತ್ಯವಿರುವುದರಿಂದ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ನೆರವು ನೀಡಬೇಕೆಂದು ರೈಲ್ವೆ ಸಚಿವರಲ್ಲಿ ಕೋಟ ಅವರು ಮನವಿ ಮಾಡಿದ್ದಾರೆ. ಕರಾವಳಿಗೆ ವಂದೇ ಭಾರತ್ ರೈಲು ವಿಸ್ತರಣೆ: ರೈಲ್ವೆ ಸಚಿವರಿಗೆ ಕೋಟ ಶ್ರೀನಿವಾಸ ಪೂಜಾರಿ ಮನವಿ






