ಉಡುಪಿ ಫೆ. 02: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ರೂ.53.5 ಲಕ್ಷ ಕೋಟಿ ಮೊತ್ತದ ಒಂಬತ್ತನೇ ಕೇಂದ್ರ ಬಜೆಟ್, ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ ಕನಸನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ಮತ್ತೊಂದು ಗಟ್ಟಿಯಾದ ಹೆಜ್ಜೆಯಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಕೇಂದ್ರ ಬಜೆಟ್–2026 ಕುರಿತು ಬಿಜೆಪಿ ಉಡುಪಿ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಜಗತ್ತು ಆರ್ಥಿಕ ಅನಿಶ್ಚಿತತೆಯ ತಲ್ಲಣಗಳಲ್ಲಿ ಮುಳುಗಿರುವ ಈ ಸಂದರ್ಭದಲ್ಲಿ ದೇಶದ ಜನತೆಯ ಮನಸ್ಸಿನಲ್ಲಿ ಆರ್ಥಿಕ ವಿಶ್ವಾಸ ತುಂಬಿರುವ ಸ್ವಾಗತಾರ್ಹ ಬಜೆಟ್ ಇದಾಗಿದೆ. ದೀರ್ಘ ಕಾಲೀನ ಆರ್ಥಿಕ ಗುರಿಯನ್ನು ಮುಟ್ಟಲು ಅಗತ್ಯವಿರುವ ಅಲ್ಪ ಕಾಲೀನ ಯೋಜನೆಗಳೊಂದಿಗೆ ಸಮದೃಷ್ಟಿಯ ಸಂತುಲಿತ ಬಜೆಟ್.
ಯಾವುದೇ ಸಮುದಾಯವನ್ನಾಗಲಿ, ಸಾರ್ವಜನಿಕ ಸಂಸ್ಥೆಯನ್ನಾಗಲಿ, ಸಾಮಾಜಿಕ ವರ್ಗಗಳನ್ನಾಗಲಿ ತುಷ್ಟೀಕರಿಸುವ ಯೋಚನೆಗಳಿಗೆ ವಿರುದ್ಧವಾಗಿ, ಜಾಗತಿಕ ಆರ್ಥಿಕ ತಲ್ಲಣವನ್ನು ಗಮನದಲ್ಲಿರಿಸಿಕೊಂಡು ದೇಶದ ಜನತೆಯ ಭವಿಷ್ಯದ ಹಿತವನ್ನು ಕಾಪಾಡಲು ಅಗತ್ಯವಿರುವ ಯೋಚನೆ ಮತ್ತು ಯೋಜನೆಗಳನ್ನು ಹೊಂದಿರುವ ಬಜೆಟ್ ಇದಾಗಿದೆ. ಜನತೆಯ ಆಶೋತ್ತರಗಳನ್ನು ಸಾಧಿಸಬಲ್ಲ ಯೋಜನೆಗಳು ಮತ್ತು ತುಷ್ಟೀಕರಣದ ಮಾನಸಿಕತೆಯಿಂದ ಹೊರ ಬಂದು ಜನಸಾಮಾನ್ಯರನ್ನು ಕೇಂದ್ರವಾಗಿರಿಸಿರುವ ಜನಪರ ಬಜೆಟ್ ಅಭಿನಂದನೀಯ.
ಮೂಲಭೂತ ಸೌಕರ್ಯಗಳು, ಕೃಷಿ, ಉದ್ಯೋಗ, ಸೆಮಿ ಕಂಡಕ್ಟರ್, ಅಪರೂಪದ ಖನಿಜಗಳು, ಡೇಟಾ ಸೆಂಟರ್ ಮುಂತಾದ ಕ್ಷೇತ್ರಗಳಲ್ಲಿ ಸ್ವಾವಲಂಬನೆಯ ಯೋಜನೆಗಳ ಅಭಿವೃದ್ಧಿಗೆ ಪೂರಕವಾಗಿರುವ ಉತ್ತಮ ಬಜೆಟ್. ಉತ್ಪಾದನೆ, ಉದ್ಯೋಗ ಮತ್ತು ಸೇವಾ ಕ್ಷೇತ್ರಗಳಿಗೆ ಆದ್ಯತೆ ನೀಡಿದ ಬಜೆಟ್ ಇದಾಗಿದೆ.
ಬಜೆಟ್ ಮಂಡನೆ ಕೇವಲ ವಾರ್ಷಿಕ ಆಯ-ವ್ಯಯದ ಅಂಕೆ ಸಂಖ್ಯೆಗಳನ್ನು ಮೀರಿ ಒಂದು ಆದ್ಯ ಕರ್ತವ್ಯವನ್ನಾಗಿಸಿದ ಬಜೆಟ್. ಸುಸ್ಥಿರ ಆರ್ಥಿಕ ಪ್ರಗತಿಯೊಂದಿಗೆ ಉತ್ಪದನಾ ಸಾಮರ್ಥ್ಯ ಹೆಚ್ಚಿಸುವುದು, ಜನತೆಯ ಆಶೋತ್ತರಗಳ ಪೂರೈಕೆ ಹಾಗೂ ಅವರ ಸಾಮರ್ಥ್ಯದಲ್ಲಿ ಹೆಚ್ಚಳದೊಂದಿಗೆ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ತತ್ವಕ್ಕೆ ಅಗತ್ಯವಿರುವ ಸಂಪನ್ಮೂಲ, ಸೌಲಭ್ಯ ಮತ್ತು ಅವಕಾಶಗಳನ್ನು ಒದಗಿಸಲು ಯೋಜಿಸಿರುವ ಬಜೆಟ್. ಅತೀ ವೇಗದ 7 ರೈಲ್ವೆ ಕಾರಿಡಾರ್ ಗಳ ಮೂಲಕ ವೇಗದ ಆರ್ಥಿಕ ಪ್ರಗತಿಯನ್ನು ಸಾಧಿಸುವ ಗುರಿ ಹೊಂದಿರುವ ಗತಿ ಶಕ್ತಿಯ ಬಜೆಟ್ ಇದಾಗಿದೆ.
ರಕ್ಷಣಾ ಕ್ಷೇತ್ರಕ್ಕೆ ಆದ್ಯತೆ ನೀಡಿ ದಾಖಲೆಯ ರೂ.7.84 ಲಕ್ಷ ಕೋಟಿ ಅನುದಾನದ ಮೂಲಕ ದೇಶದ ಭದ್ರತೆಯ ದೂರಾಲೋಚನೆಯ ದೂರದರ್ಶಿತ್ವದ ಬಜೆಟ್. ಪ್ರಾದೇಶಿಕ ಮೆಡಿಕಲ್ ಹಬ್ ಗಳ ಮೂಲಕ ಮೆಡಿಕಲ್, ಪ್ರವಾಸೋದ್ಯಮ, ನಿಮ್ಹಾನ್ಸ್ ಆಸ್ಪತ್ರೆಗಳು, ಮೈನಿಂಗ್ ಕಾರಿಡಾರ್, ಬಯೋ ಫಾರ್ಮ, ಎ.ಐ. ಮಿಶನ್ ಮೂಲಕ ಎ.ಐ. ತಂತ್ರಜ್ಞಾನ ಅಭಿವೃದ್ಧಿ ಹಾಗೂ ಇನ್ನಿತರ ಆಧುನಿಕ ತಂತ್ರಜ್ಞಾನಗಳ ಬೆಳವಣಿಗೆಗೆ ಆದ್ಯತೆ ನೀಡಿರುವ ಸ್ವಾಗತಾರ್ಹ ಬಜೆಟ್.
ಪ್ರಧಾನ ಮಂತ್ರಿಗಳು ಹೇಳಿರುವಂತೆ ಈ ಬಜೆಟ್ ದೇಶದ 140+ ಕೋಟಿ ಭಾರತೀಯರ ಆಶೋತ್ತರಗಳನ್ನು ಪ್ರತಿಬಿಂಬಿಸುವ ಐತಿಹಾಸಿಕ ಬಜೆಟ್ ಆಗಿದೆ. ಸುಧಾರಣೆಯ ಪಯಣದ ದಿಕ್ಕು ಬದಲಿಸಿದ್ದು 2047ರ ಒಳಗೆ ‘ವಿಕಸಿತ ಭಾರತ’ದ ಕನಸು ಸಾಕಾರಗೊಳಿಸುವ ನೀಲಿ ನಕ್ಷೆಯ ಬಜೆಟ್ ಇದಾಗಿದೆ. ದೇಶಕ್ಕೆ ಹೊಸ ಶಕ್ತಿ ಮತ್ತು ವೇಗ ನೀಡುವ ಬಜೆಟ್ ಇದಾಗಿದೆ. ವಿಶ್ವ ಭೂಪಟದಲ್ಲಿ ಭಾರತದ ಜಾಗತಿಕ ಪಾತ್ರವನ್ನು ಇನ್ನಷ್ಟು ಸ್ಪಷ್ಟಗೊಳಿಸಿದ ಬಜೆಟ್ ಇದಾಗಿದೆ. ವಿಶ್ವದ 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಸ್ಪಷ್ಟ ಗುರಿ ಹೊಂದಿರುವ ಬಜೆಟ್ ಇದಾಗಿದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ವಕ್ತಾರ ದಿವಾಕರ ಶೆಟ್ಟಿ ಕಾಪು, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.






