ಕುಂದಾಪುರ: ಡಿಸೆಂಬರ್ 22: ಕೋಟೇಶ್ವರ ಪಂಚಾಯಿತಿಯ ಎಸ್ಎಲ್ಆರ್ಎಂ ಒಣ ತ್ಯಾಜ್ಯ ಘಟಕಕ್ಕೆ ಭಾನುವಾರ ಬೆಳಿಗ್ಗೆ ಅಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಸ್ವತ್ತುಗಳು ಆಹುತಿಯಾಗಿದೆ.
ಮುಂಜಾನೆ 4.30ಕ್ಕೆ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದುದ್ದನ್ನು ಗಮನಿಸಿದ ಅಯ್ಯಪ್ಪ ಸ್ವಾಮಿ ಮಾಲಧಾರಿಗಳು ಪಂಚಾಯಿತಿ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.
ಕುಂದಾಪುರ ಮತ್ತು ಬೈಂದೂರು ಅಗ್ನಿಶಾಮಕ ಠಾಣೆ ಸಿಬ್ಬಂದಿ, ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಕೋಟೇಶ್ವರ ಘಟಕದ ಕಾರ್ಯಕರ್ತರು, ಕುಂದಾಪುರ ಪೊಲೀಸರು, ಮೆಸ್ಕಾಂ ಸಿಬ್ಬಂದಿ, ಮೋಕ್ಷ ತಂಡದ ಸದಸ್ಯರು ಮತ್ತು ಸ್ಥಳೀಯರು 7 ತಾಸು ಕಾರ್ಯಚಾರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ಕೆಳ ಭಾಗದಲ್ಲಿರುವ ಅಂಗಡಿಗಳಿಗೆ ಹಾನಿಯಾಗಿದೆ. ಕೋಟೇಶ್ವರದ ಗಣೇಶ್ ಪೈ ಅವರ ತರಕಾರಿ ಅಂಗಡಿಯ ಛಾವಣಿ ಸಂಪೂರ್ಣ ಸುಟ್ಟುಹೋಗಿದೆ. ತಿಮ್ಮಣ್ಣ ಹಾಗೂ ಪಾಂಡುರಂಗ ಪೈ ಅವರ ದಿನಸಿ ಅಂಗಡಿಗೂ ಹಾನಿಯಾಗಿದ್ದು ಸುಮಾರು ₹ 50 ಸಾವಿರ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ವಿಶ್ವನಾಥ್ ಆಚಾರ್ ಮಾಲೀಕತ್ವದ ಸ್ವರ್ಣಶ್ರೀ ಜುವೆಲ್ಲರಿಯ ಸಿಸಿಟಿವಿ ಕ್ಯಾಮೆರಾ, ಟಿವಿ ಕೇಬಲ್, ಬಾಗಿಲಿನ ಗ್ಲಾಸ್ಗೂ ಹಾನಿಯಾಗಿದೆ.
ಘಟನಾ ಸ್ಥಳಕ್ಕೆ ಶಾಸಕ ಎ.ಕಿರಣ್ಕುಮಾರ್ ಕೊಡ್ಗಿ ಭೇಟಿ ನೀಡಿದರು. ತುರ್ತು ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು





