ಉಡುಪಿ: ನವೆಂಬರ್ 08:ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಜಿಲ್ಲಾ ಸಮಿತಿ ಕಚೇರಿ ಇಂದು ಹಳೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿಯ ರಾಜರಾಮ್ ಮೋಹನ್ ರಾಯ್ ರಸ್ತೆಯಲ್ಲಿರುವ ಮಹಾಮಾಯ ಕಾಂಪ್ಲೆಕ್ಸ್ ಎರಡನೇ ಮಹಡಿಯಲ್ಲಿ ಉದ್ಘಾಟನೆ ನೆರವೇರಿತು.
ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಾಸ್ತಾವಿಕ ಮಾತನಾಡಿ: ಸರ್ಕಾರದ ನೀತಿಗಳಿಂದ ಜಿಲ್ಲೆಯ ಅಪಾರ ಸಂಖ್ಯೆಯ ಜನರು ಇಂದು ಸಂಕಷ್ಟದಲ್ಲಿದ್ದಾರೆ.ಜಿಲ್ಲೆಗೆ ಸಿಪಿಎಂ ಪಕ್ಷವೇ ಪರ್ಯಾಯ ಆಗಬೇಕಾಗಿದೆ.
ಜನರನ್ನು ಬೆಲೆ ಏರಿಕೆಯಿಂದ ರಕ್ಷಿಸಬೇಕಾದ ಹೊಣೆ ಪಕ್ಷದ ಮೇಲಿದೆ.ಕಾರ್ಮಿಕ ವರ್ಗದ ಪಕ್ಷವಾಗಿ ಕಾರ್ಮಿಕರ ಕಾನೂನು ರಕ್ಷಿಸಬೇಕು ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆಗಬೇಕು.ರೈತರು,ಕೂಲಿಕಾರರು ಪಕ್ಷದ ಬೆನ್ನೆಲುಬು ಅವರನ್ನು ಸಂಘಟಿಸಲು ಮುತುವರ್ಜಿ ವಹಿಸಬೇಕು.ಕೋಮುದ್ವೇಷ ಹರಡಿ ರಾಜಕಾರಣ ಮಾಡಿ ಜನರ ಪ್ರೀತಿ, ವಿಶ್ವಾಸ ಒಡೆಯುವ ಶಕ್ತಿಗಳ ವಿರುದ್ಧ ಹೆಚ್ಚು ಹೆಚ್ಚು ಕೆಲಸ ಮಾಡಬೇಕಾಗಿದೆ ನೆಮ್ಮದಿಯ, ಸೌಹಾರ್ದತೆಯ ಉಡುಪಿ ಜಿಲ್ಲೆ ಕಟ್ಟುವ ಕೆಲಸ ಪ್ರತಿಯೊಬ್ಬ ಪಕ್ಷದ ಸದಸ್ಯರು ಮಾಡಬೇಕು ಎಂದು ಅವರು ಹೇಳಿದರು.
ಕಚೇರಿ ಉದ್ಘಾಟನೆಯನ್ನು ಪಕ್ಷದ ಹಿರಿಯ ಸದಸ್ಯರಾದ ಅದಮಾರು ಶ್ರೀಪತಿ ಆಚಾರ್ಯ ಉದ್ಘಾಟಿಸಿ ಮಾತನಾಡಿ: ಸಿಪಿಎಂ ಚುನಾವಣೆಯಲ್ಲಿ ಸೋಲಬಹುದು ಆದರೆ ನಿರಂತರ ಜನರ ನಡುವೆ ಅಧಿಕಾರದಲ್ಲಿರುತ್ತದೆ.ಕಮ್ಯುನಿಸ್ಟ್ ಬಗ್ಗೆ ಕೆಲವು ಮಂದಿ ಪೂರ್ವಗ್ರಹಪೀಡಿತರಾಗಿರುತ್ತಾರೆ.
ಸಿಪಿಎಂ ಎಲ್ಲಾ ಮತಗಳನ್ನು ಗೌರವಿಸುತ್ತದೆ ಆದರೆ ನಮ್ಮ ಮತವೇ ಶ್ರೇಷ್ಠ ಎಂಬುವುದನ್ನು ಮಾತ್ರ ದ್ವೇಷಿಸುತ್ತದೆ ಈ ವೈಚಾರಿಕ ವಿಚಾರಗಳನ್ನು ಜನರ ಬಳಿ ಹೋಗಬೇಕು ಪಕ್ಷ ಆ ಕೆಲಸ ಮಾಡಬೇಕು.ನೊಂದವರ,ಶೋಷಿತರ ಪರವಾಗಿ ನಿಲ್ಲುವುದೇ ಪಕ್ಷ ಸಿದ್ಧಾಂತವಾಗಿ ರುವುದರಿಂದ ಪಕ್ಷವನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು.
ಸಿಪಿಎಂ ಹಿರಿಯ ಸದಸ್ಯ ಕೆ ಶಂಕರ್ ಅವರು ಪಕ್ಷದ ನಾಮಫಲಕ ಉದ್ಘಾಟಿಸಿ ಮಾತನಾಡಿದರು.
ಸಹೋದರ ಪಕ್ಷ ಸಿಪಿಐನ ಕಾರ್ಯದರ್ಶಿ ಶೇಖರ್ ಅವರು ಶುಭಾಶಯ ಎಡಪಕ್ಷಗಳ ಅಗತ್ಯತೆ ಬಗ್ಗೆ ಹಾಗೂ ಶುಭ ಕೋರಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಉಡುಪಿ ವಲಯ ಸಮಿತಿ ಕಾರ್ಯದರ್ಶಿ ಶಶಿಧರ್ ಗೊಲ್ಲ ವಹಿಸಿದ್ದರು.

ಸಭೆಯಲ್ಲಿ ಕಟ್ಟಡ ಮಾಲಕರಾದ ಲಕ್ಷ್ಮೀನಾರಾಯಣ ಭಟ್ ಇದ್ದರು.ಜಿಲ್ಲಾ ಸಮಿತಿ ಸದಸ್ಯ ಕವಿರಾಜ್ ಎಸ್ ಕಾಂಚನ್, ಉಮೇಶ್ ಕುಂದರ್, ಶೀಲಾವತಿ ಪಡುಕೋಣೆ,ವಾಮನ ಪೂಜಾರಿ,ಸಿಪಿಐ ಶಿವಾನಂದ, ಕೋಣಿ ವೆಂಕಟೇಶ್, ಬಲ್ಕೀಸ್,ಸರೋಜ,ಸಂಜೀವ ಬಳ್ಕೂರು ಮೊದಲಾದವರಿದ್ದರು.








