ಉಡುಪಿ :ನವೆಂಬರ್ 05: ಬೀದಿ ನಾಯಿಗಳಿಗೆ ಸಂಬಂಧಿಸಿ ಹಲವು ಸಮಸ್ಯೆಗಳಿಗೆ ಉಡುಪಿ ನಗರಸಭೆ ಪ್ರಮುಖ ಸೂಚನೆಗಳನ್ನು ನೀಡಿದೆ.
ಬೀದಿ ನಾಯಿಗಳಿಗೆ ಕಂಡಕಂಡಲ್ಲಿ ಆಹಾರ ಹಾಕುವಂತಿಲ್ಲ, ಆಹಾರ ಹಾಕುವವರಿಗೆ ಗುರುತಿನ ಚೀಟಿ ಇರಬೇಕು, ನಾಯಿ ಮರಿಗಳನ್ನು ತಂದು ರಸ್ತೆಯಲ್ಲಿ ಬಿಡುವಂತಿಲ್ಲ ಎಂಬುದು ಇವುಗಳಲ್ಲಿ ಪ್ರಮುಖವಾಗಿವೆ.
ಇದರ ಪ್ರಕಾರ, ಮುಂದೆ ಬೀದಿ ನಾಯಿಗಳಿಗೆ ಆಹಾರ ಹಾಕಲು ಕೆಲವು ಜಾಗಗಳನ್ನು ನಿಗದಿ ಮಾಡಲಾಗಿದೆ. ಅದನ್ನು ಬಿಟ್ಟು ಅನಧಿಕೃತವಾಗಿ ರಸ್ತೆಯ ಚರಂಡಿಗಳ ಮೇಲೆ, ಶಾಲಾ ವಠಾರ, ಜನ ನಿಬಿಡ ಪ್ರದೇಶ, ಬಸ್ ನಿಲ್ದಾಣ ಸೇರಿದಂತೆ ಇತರ ಸ್ಥಳಗಳಲ್ಲಿ ಸಾರ್ವಜನಿಕರು ಆಹಾರ ಹಾಕಬಾರದು ಎಂದು ನಗರಸಭೆ ತಿಳಿಸಿದೆ.
ನಗರಸಭೆಯಿಂದ ಪ್ರಾಥಮಿಕ ಹಂತದಲ್ಲಿ ಬೀಡಿನ ಗುಡ್ಡೆ ಹಿಂದೂ ರುದ್ರ ಭೂಮಿ ಎದುರುಗಡೆ, ಆದಿ ಉಡುಪಿ ಮಾರುಕಟ್ಟೆ ಹಿಂಬದಿ, ಇಂದ್ರಾಳಿ ಹಿಂದೂ ರುದ್ರ ಭೂಮಿ ಎದುರುಗಡೆ, ಪರ್ಕಳ ಸ್ವಾಗತ ಗೋಪುರದ ಹತ್ತಿರ, ನಿಟ್ಟೂರು ಕೊಳಚೆ ನೀರು ಶುದ್ದೀಕರಣ ಘಟಕದ ಎದುರುಗಡೆ, ಪೆರಂಪಳ್ಳಿ ಮುಖ್ಯ ರಸ್ತೆಯ ಭಾರತೀಯ ವಿಕಾಸ ಟ್ರಸ್ಟ್ ಕೆಳಗಡೆ, ‘ರಾಜ್ ಫಿಶ್ ಮಿಲ್ ಹತ್ತಿರ, ಆದಿ ಉಡುಪಿ, ಮಲ್ಪೆ ರಸ್ತೆಯ ಹೆಲಿಪ್ಯಾಡ್ ಹತ್ತಿರ, ಕಕ್ಕುಂಜೆ ನಾರಾಯಣ ನಗರ ಹೋಗುವ ರಸ್ತೆಯ ತಿರುವು ಬಳಿ ಹಾಗೂ ಬೈಲೂರು ಹನುಮಾನ್ ಗ್ಯಾರೇಜ್ ಡಯಾನ ರಸ್ತೆ ವಿಜಯ ವೀರ ಸಂಘದ ಹತ್ತಿರ ನಿಯಮಾನುಸಾರ ಷರತ್ತು ವಿಧಿಸಿ ಬೀದಿ ನಾಯಿಗಳಿಗೆ ಆಹಾರ ಹಾಕಲು ನೀಡಲು ಸ್ಥಳ ಗುರುತಿಸಲಾಗಿದೆ.
ಇದರೊಂದಿಗೆ ಇತರೆ ಯಾವುದೇ ಸ್ಥಳದಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಲು ಸಾರ್ವಜನಿಕರು ಮುಂದೆ ಬಂದಲ್ಲಿ ನಗರಸಭೆ ಕಚೇರಿಗೆ ಲಿಖೀತ ಮನವಿ ಸಲ್ಲಿಸಿದರೆ ಪರಿಶೀಲಿಸಿ ಅನುಮತಿ ನೀಡಲು ಕ್ರಮವಹಿಸಲಾಗುವುದು.
ಬೀದಿ ನಾಯಿಗಳಿಗೆ ಆಹಾರ ಹಾಕುವವರಿಗೆ ಅನುಮತಿ ಹಾಗೂ ಗುರುತು ಚೀಟಿ ಕಡ್ಡಾಯ.
ಆಹಾರ ಹಾಕುವವರು ನಗರಸಭೆಯ ಕಚೇರಿಯಿಂದ ಲಿಖೀತವಾಗಿ ಅರ್ಜಿ ನೀಡಿ ನಿಯಮಾನುಸಾರ ಅನುಮತಿ ಪಡೆದುಕೊಳ್ಳಬೇಕು.
ಬೀದಿ ನಾಯಿಗಳಿಗೆ ಆಹಾರ ಹಾಕುವವರೇ ನಾಯಿಗಳಿಗೆ ರೇಬಿಸ್ ಲಸಿಕೆ ಹಾಗೂ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಬೇಕು.
ಮನೆಗಳಲ್ಲಿ ನಾಯಿ ಸಾಕುವವರು ನಾಯಿಗಳ ಮರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತಂದು ಬಿಡುತ್ತಿರುವುದು ಕಂಡು ಬಂದಿದ್ದು, ಇದರಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಸಾರ್ವಜನಿಕರು ಮನೆಗಳಲ್ಲಿ ಸಾಕುವ ನಾಯಿಗಳಿಗೆ ರೇಬಿಸ್ ಲಸಿಕೆ ಹಾಗೂ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಬೇಕು. ಜತೆಗೆ ಸಾಕು ನಾಯಿಗಳಿಗೆ ಬೆಲ್ಟ್ ಅಳವಡಿಸಬೇಕು.
ಯಾವುದೇ ಸಾಕು ನಾಯಿಗಳನ್ನು ಹಾಗೂ ಅದರ ಮರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತಂದು ಬಿಟ್ಟಿರುವುದು ಕಂಡು ಬಂದಲ್ಲಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.








