ಕೋಟ:ಅಕ್ಟೋಬರ್ 16 :ಸದ್ಭಾವನಾ 2025 ಎಂಬ ಶೀರ್ಷಿಕೆಯಡಿ ನ.16ರಂದು ಕೋಟದ ಗಾಂಧಿ ಮೈದಾನದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪತ್ರಕರ್ತೆ, ರಾಜ್ಯ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತೆ ವಿಜಯಲಕ್ಷ್ಮೀ ಶಿಬರೂರು ಅವರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ
ಪಂಚವರ್ಣ ಯುವಕ ಮಂಡಲ ಕೋಟ ಹಾಗೂ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ನೀಡುವ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ವಿಜಯಲಕ್ಷ್ಮೀ ಶಿಬರೂರು ಅವರನ್ನು ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿ 25 ಸಾವಿರ ಮೌಲ್ಯದ ಬೆಳ್ಳಿ ಫಲಕ ಒಳಗೊಂಡಿದೆ. ಇದೇ ವೇಳೆ ವಿಶೇಷ ಪುರಸ್ಕಾರವನ್ನು ರಥಶಿಲ್ಪಿ ಕೋಟೇಶ್ವರ ರಾಜಗೋಪಾಲ ಆಚಾರ್ಯ ಅವರಿಗೆ ನೀಡಲಿದೆ.
ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ವಿದ್ಯಾರ್ಥಿವೇತನ, ಸ್ಥಳೀಯ ಅಂಗನವಾಡಿಗೆ ಸಮವಸ್ತ , ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ ದತ್ತಿನಿಧಿ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಈ ವೇದಿಕೆಯಲ್ಲಿ ನೀಡ ಲಿದೆ. ಪಂಚವರ್ಣ ಮಹಿಳಾ ಮಂಡಲದಿಂದ ಯಕ್ಷರೂಪಕ, ಮಯೂರಿ ನೃತ್ಯ ತಂಡ ಕುಂಭಾಶಿ ನೃತ್ಯ, ಸ್ಥಳೀಯ ಅಂಗನವಾಡಿ ಪುಟಾಣಗಳಿಂದ ಸಾಂಸ್ಕೃತಿಕ ಸಿಂಚನ, ಅವಿಭಜಿತ ಜಿಲ್ಲೆಗಳ ಪ್ರಸಿದ್ಧ ನಾಟಕ ತಂಡ ಚಾಪರ್ಕ ಕಲಾವಿದರಾದ ದೇವದಾಸ್ ಕಾಪಿಕಾಡ್ ಇವರ ಸಾಮಾಜಿಕ ಹಾಸ್ಯಮಯ ‘ಯಾರೂ ಗ್ಯಾರಂಟಿ ಅಲ್ಲ’ ನಾಟಕ ಪ್ರದರ್ಶನ ಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ಹಾಗೂ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








