ಉಡುಪಿ: ಜೂನ್ 06 : ಸಂಸ್ಕೃತಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಮತ್ತು ಪ್ರಾಚಾರ್ಯರು ಹಾಗೂ ಅಧ್ಯಾಪಕರು ಇಂದು ೮-೬-೨೦೨೫ ರಂದು ಸ್ವಪ್ರೇರಣೆಯಿಂದ ಬರೆದ ಭಗವದ್ಗೀತಾಲೇಖನ ಪುಸ್ತಕಗಳನ್ನು ಪರ್ಯಾಯಶ್ರೀಪಾದರಾದ ಶ್ರೀಶ್ರೀ ಸುಗುಣೇಂದ್ರತೀರ್ಥಶ್ರೀಪಾದರ ಸಾನ್ನಿಧ್ಯದಲ್ಲಿ ಸಮರ್ಪಿಸಿದರು.
ಕಿರಿಯಶ್ರೀಪಾದರಾದ ಶ್ರೀಶ್ರೀ ಸುಶ್ರೀಂದ್ರತೀರ್ಥಶ್ರೀಪಾದರೂ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಶೀರ್ವಚಿಸಿದ ಪರ್ಯಾಯಶ್ರೀಪಾದರು, ವಿದ್ಯಾರ್ಥಿಜೀವನದಲ್ಲೇ ಭಗವದ್ಗೀತೆಯನ್ನು ಬರೆಯುವುದು ಹಾಗು ಓದುವುದರಿಂದ ಹೆಚ್ಚಿನ ಲಾಭವಿದೆ.
ಜೀವನದ ಹೆಚ್ಚಿನ ಭಾಗದಲ್ಲಿ ಗೀತೆಯ ಮಾರ್ಗದರ್ಶನವನ್ನು ಪಡೆಯಬಹುದಾಗಿದೆ. ಗೀತೆಯನ್ನು ಆವರ್ತಿಸಿದಷ್ಟು ಬಾರಿ ಗೀತೆಯ ಹೊಸ ಹೊಸ ಅಭಿಪ್ರಾಯಗಳು ಕಾಣಿಸಿಕೊಳ್ಳುವವು,
ನಮ್ಮ ದೇಶ-ಕಾಲ ಪರಿಸ್ಥಿತಿಗೆ ಅನುಗುಣವಾದ ದಾರಿಯನ್ನು ಗೀತೆಯು ತೋರಿಸಿಕೊಡುತ್ತದೆ.
ಗೀತೆಯ ಸಂದೇಶ ತುಂಬಾ ವಿಶಾಲವಾಗಿದೆ.
ಯಾವುದೇ ದೇಶ-ಭಾಷೆ, ಜಾತಿ-ವರ್ಣ, ಮತ-ಧರ್ಮಗಳ ಗಡಿಗಳನ್ನು ಮೀರಿನಿಂತಿದೆ.
ಶ್ರೀಕೃಷ್ಣ ದೇವರು, ಪರಿತ್ರಾಣಾಯ ಸಾಧೂನಾಂ ವಿನಾಶಯ ಚ ದುಷ್ಕೃತಾಂ ಎಂಬ ಗೀತೆಯ ಮಾತಿನಲ್ಲಿ ಯಾವುದೇ ಬ್ರಾಹ್ಮಣ ಮೊದಲಾದ ಜಾತಿಯನ್ನಾಗಲೀ ಹಿಂದೂ ಮೊದಲಾದ ಧರ್ಮವನ್ನಾಗಲೀ ಹೆಸರಿಸದೇ ಸಜ್ಜನರ ರಕ್ಷಣೆ ಮತ್ತು ದುರ್ಜನರ ಶಿಕ್ಷಣವೇ ನನ್ನ ಗುರಿ ಎಂದು ಹೇಳಿದ್ದಾರೆ.
ಇಂತಹಾ ವಿಶಾಲವಾದ ಅನೇಕ ದೃಷ್ಟಿಕೋನದ ಉದ್ಗಾರ ಗೀತೆಯಲ್ಲಿದೆ.
ಮುಂದಿನ ಆಧ್ಯಾತ್ಮಿಕ ಯುಗದಲ್ಲಿ ಗೀತೆಯನ್ನು ಬಲ್ಲವರು ಮತ್ತು ಬೋಧಿಸುವವರಿಗೆ ಹೆಚ್ಚಿನ ಬೇಡಿಕೆ ಇರಲಿದೆ. ಆದ್ದರಿಂದ ಸಂಸ್ಕೃತವನ್ನು ಓದಿದವರು ಭಗವದ್ಗೀತೆಯನ್ನು ಅಧ್ಯಯನವನ್ನು ಮಾಡುವುದು ಸಫಲವಾಗಲಿದೆ ಎಂದರು.
*ತುಳುಲಿಪಿಯಲ್ಲಿ ಗೀತಾಲೇಖನ*
ಸಂಸ್ಕೃತಕಾಲೇಜಿನ ಉಪನ್ಯಾಸಕರಾದ ಡಾ. ರಾದಾಕೃಷ್ಣ ಭಟ್ ಬೆಂಗ್ರೋಡಿಯವರು ಅಪೂರ್ವವಾಗಿ ತುಳುಲಿಪಿಯಲ್ಲಿ ಭಗವದ್ಗೀತೆಯನ್ನು ಬರೆದು ಸಮರ್ಪಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಇವರನ್ನು ಪರ್ಯಾಯಶ್ರೀಪಾದರು ವಿಶೇಷವಾಗಿ ಅಭಿನಂದಿಸಿದರು
ಪ್ರತಿದಿನವೂ ನೂರಾರು ಮಂದಿ ಗೀತಾಲೇಖನ ಸಮರ್ಪಣೆ ಮಾಡುತ್ತಿದ್ದಾರೆ. ಪ್ರಯೊಬ್ಬರೂ ಒಂದೊಂದು ಹೊಸ ಹೊಸ ಲಾಭಪಡೆದ ಅನುಭವವನ್ನು ಹೇಳಿಕೊಳ್ಳುತ್ತಿದ್ದಾರೆ. ಹಾಗೆಯೇ ತಮ್ಮೆಲ್ಲರಿಗೂ ಗೀತಾಚಾರ್ಯ ಶ್ರೀಕೃಷ್ಣನ ಅನುಗ್ರಹವಾಗಲಿ ಎಂದು ಪ್ರಮಾಣಪತ್ರ ಮತ್ತು ಮಂತ್ರಾಕ್ಷತೆಗಳನ್ನಿತ್ತು ಹರಸಿದರು.
ಈ ಸಂದರ್ಭದಲ್ಲಿ ಸಂಸ್ಕೃತಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತ್ಯನಾರಾಯಣ ವಿ ರಾವ್ ಅವರು ವಿದ್ಯಾರ್ಥಿಗಳವತಿಯಿಂದ ಉಭಯಶ್ರೀಪಾದರುಗಳನ್ನು ಫಲವಿತ್ತು ಶುಷ್ಕಫಲೋಷ್ಣಿಷವನ್ನು ತೊಡಿಸಿ ಗೌರವಿಸಿದರು.
ವಿದ್ಯಾರ್ಥಿಗಳು ಶ್ರೀಪಾದರ ಹಸ್ತಲಿಖಿತ ಶ್ರೀಪಾದರ ಡಿಜಿಟಲ್ ಚಿತ್ರಕಲೆಯ ವರ್ಣ ಚಿತ್ರವನ್ನು ಸಮರ್ಪಿಸಿದರು.
ಶ್ರೀಪಾದರ ಅಂತಾರಾಷ್ಟ್ರಿಯ ಕಾರ್ಯದರ್ಶಿಗಳದ ವಿ| ಪ್ರಸನ್ನಾಚಾರ್ಯರು ಮತ್ತು ಕೋಟಿ ಗೀತಾ ಲೇಖನ ಯಜ್ಞದ ಅನಂತ ಕೃಷ್ಣ ಪ್ರಸಾದ್,ಕಾಲೇಜಿನ ಉಪನ್ಯಾಸಕರಾದ ಡಾ. ರಾಧಾಕೃಷ್ಣ ಭಟ್, ವಿ| ಗಣಪತಿ ಭಟ್ ಮತ್ತು ವಿ|ಶ್ರೀನಿವಾಸತಂತ್ರೀ ಉಪಸ್ಥಿತರಿದ್ದರು.
ಪ್ರೋ.ಷಣ್ಮುಖ ಹೆಬ್ಬಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
ವಿದ್ಯಾರ್ಥಿನಾಯಕ ಶ್ರೀವತ್ಸ ಉಪಾಧ್ಯಾಯ, ಶ್ರೀಕರ ಉಪಾಧ್ಯಾಯ ಮತ್ತು ಮುಕುಂದ ಕೊಡಂಕಿರಿ ಸಹಕರಿಸಿದರು.